Your cart is empty now.
ಕೆರೆ ಜಾಗೃತಿ ಕಾರ್ಯಕ್ರಮಗಳಲ್ಲಿ 'ಕೆರೆಯ ಹೂಳಿಗಿಂತ ಮುಂಚೆ ತಲೆಯ ಹೂಳು ತೆಗೆಯಬೇಕು' ಎಂದು ೨೫ ವರ್ಷಗಳ ಹಿಂದೆ ನುಡಿದವರು ಬರಹಗಾರ ಶಿವಾನಂದ ಕಳವೆ. ಕರ್ನಾಟಕದ ಪುರಾತನ ಕೆರೆ ವೀಕ್ಷಣೆ, ಕಣಿವೆ ಕೆರೆ ನಿರ್ಮಾಣ, ಜನಸಹಭಾಗಿತ್ವದಲ್ಲಿ ಕೆರೆ ಪುನರುಜ್ಜಿವನದ ಅನುಭವದಲ್ಲಿ ಬೆಳೆದವರು. ಬೀದರ್ ಜಿಲ್ಲೆಯ ಅಲಿಯಂಬರದಿಂದ ಕೊಳ್ಳೇಗಾಲದ ಕೋಟೆಕೆರೆಯವರೆಗೆ ಹಲವು ತಿಂಗಳು ಕೆರೆ ವೀಕ್ಷಣೆಯ ಪಯಣದಲ್ಲಿ ಜನಪದರ ಬದುಕು ಅರಿಯುತ್ತ ಸಹಸ್ರಾರು ಕೆರೆಗಳ ಪ್ರತ್ಯಕ್ಷ ದರ್ಶನ ಪಡೆದವರು. ರಾಜ್ಯದ ಕೆರೆ ಪುನಶ್ವೇತನ ಕಾರ್ಯಗಳಿಗೆ ಸಮುದಾಯ, ಸರಕಾರಕ್ಕೆ ನಿರಂತರ ಮಾರ್ಗದರ್ಶನ ನೀಡುತ್ತ ಬಂದಿದ್ದಾರೆ. ಹಳ್ಳಿಗರು, ಉದ್ಯಮಿಗಳು, ಸಿನೆಮಾ ನಟರು, ಸಂಘ ಸಂಸ್ಥೆಗಳು, ಸಾಧುಸಂತರು, ರಾಜಕೀಯ ನೇತಾರರು, ಸಚಿವರು ಸೇರಿದಂತೆ ಕೆರೆಯ ಕೆಲಸ ಎಲ್ಲರ ಕೆಲಸವೆನ್ನುತ್ತ ಮಹತ್ವದ ಕಾರ್ಯವನ್ನು ಅದೆಷ್ಟು ಜನರ ಜೊತೆಗೆ ಮಾಡಿದ್ದಾರೆಂಬುದೇ ಕೃತಿಯ ಅಚ್ಚರಿ. ಕಳೆದ ೨೦ ವರ್ಷಗಳಲ್ಲಿ ನೀರಿನ ಮಾತು ಕೇಳಲು ಇವರ ಊರು ಕಳವೆಗೆ ಯಾರೆಲ್ಲ ಬಂದಿದ್ದಾರೆಂಬುದು ಕಾಯಕ ಪ್ರೀತಿಗೆ ಸಾಕ್ಷಿ.
ಕೃಷಿ, ಕಾಡು, ನದಿಗಳ ಕುರಿತ ಕಳವೆಯವರ ದೇಸಿ ಜ್ಞಾನ ಮಾರ್ಗ ಅನನ್ಯ ಕ್ರಿ.ಶ.೨೦೧೬-೧೭ರ ರಾಜ್ಯ ತೀವ್ರ ಬರದಲ್ಲಿ ತತ್ತರಿಸಿದಾಗ ಯಾರೂ ನೋಡದ ಆಘಾತಕಾರಿ ಚಿತ್ರಗಳನ್ನು 'ಕ್ಷಾಮಡಂಗುರ'ದ ಬರಪ್ರವಾಸದಲ್ಲಿ ತೆರೆದಿಟ್ಟಿದ್ದರು. ಅದೇ ನೆಲೆಗಳಲ್ಲಿ ಈಗ ಕೆರೆ ಪುನರುಜ್ಜಿವನದ ಕಥನ ದರ್ಶನವಿದೆ. ರಚನಾತ್ಮಕ ಕಾರ್ಯಗಳಿಂದ ಸರಕಾರೀ ಕೆರೆ ಸಮುದಾಯದ ಕೆರೆಯಾಗುವ ಪ್ರಕ್ರಿಯೆಗಳ ಒಳಗಿಳಿದು ಪರಿಣಾಮಕಾರಿಯಾಗಿ ದಾಖಲಿಸಿದ್ದಾರೆ. ಕೆರೆಯೆಂಬ ಕನ್ನಡಿಯಲ್ಲಿ ಕಳವೆಯವರು ಕಂಡ ಜನಜೀವನ ಅನುಭವಗಳು, ಚರಿತ್ರೆ, ದಾಖಲೆಗಳು ‘ಕೆರೆಯ ನೋಡಿರೋ' ಕೃತಿಯಲ್ಲಿದೆ, ಇದು ನಿಮ್ಮೂರ ಕೆರೆ ಕಾಳಜಿಯ ಪ್ರೇರಣೆಯಾಗಲಿ.
-ಎಂ.ಎ.ಸುಬ್ರಹ್ಮಣ್ಯ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.