Your cart is empty now.
ಚರಿತ್ರೆಯಲ್ಲಿ ಹುದುಗಿಹೋದ ಅಂಶಗಳು ಬಹಳಷ್ಟಿದೆ ಭಾರತದ ಚರಿತ್ರೆಯ ಮಟ್ಟಿಗೆ ಈ ಮಾತು ಇನ್ನಷ್ಟು ಹೆಚ್ಚು ಅನ್ವಯವಾಗುತ್ತದೆ. ಕಾರಣವೇನೆಂದರೆ ಇತಿಹಾಸವನ್ನು ನಿರ್ಮಿಸಿದವರೇ ಇಲ್ಲಿ ಇತಿಹಾಸವನ್ನು ಬರೆಯಲಿಲ್ಲ. ಇತಿಹಾಸವನ್ನು ಬರೆದವರು ಇತಿಹಾಸ ನಿರ್ಮಿಸಿದವರ ಮೂಲಗಳಿಂದಲೇ ಬಂದವರಾಗಿದ್ದರೆ ಒಂದು ತೆರನಾಗಿರುತ್ತಿತ್ತು. ಅಥವಾ ಇಲ್ಲಿನ ಜನ ಸಮುದಾಯಗಳ ಬಗ್ಗೆ ವಸ್ತುನಿಷ್ಠ ನಿಲುವು ಹೊಂದಿದವರಾಗಿದ್ದರೂ ಒಂದು ತೆರನಾಗಿರುತ್ತಿತು. ಹಾಗಿರಲಿಲ್ಲವಾದ ಕಾರಣದಿಂದ ಇತಿಹಾಸದಲ್ಲಿ ಮನೆ ಮಾಡಿದ ಅಂಶಗಳಿರುವಂತೆಯೇ ತಿರುಚಿದ ಅಂತಗಳು ದಾಖಲುಗೊಂಡವು, ಜಾತಿ, ಮತ, ಪಂಗಡಗಳ ಕುರಿತಾಗಿ ಇದ್ದ ತಾರತಮ್ಯಗಳು, ಮೇಲು ಕೀಳಿನ ಭಾವನೆಗಳು ಪೂರ್ವಗ್ರಹಗಳು ಸತ್ಯನಿಷ್ಟವಾದ ಚರಿತ್ರೆಯನ್ನು ಬರೆಯುವಲ್ಲಿ ತೊಡಕನ್ನುಂಟು ಮಾಡಿದವು.
ಈಗೀಗ ತಳ ಸಮುದಾಯಗಳ ಲೇಖಕರು ಮರೆತು ಹೋದ ಅಥವಾ ಅವಿತು ಹೋದ ತಮ್ಮ ಜಾತಿ-ಕುಲಗಳ ಚರಿತ್ರೆಯನ್ನು ಪುನಃ ತೋರಿಸಿ ಬರೆಯಲು ಆರಂಭಿಸಿದ್ದಾರೆ. ಇಂತಹ ಬರಹಗಳಿಗೆ ಮೂಲ ಪ್ರೇರಣೆಯನ್ನು ಅಂಬೇಡ್ಕರ್ ವಾದ ಒದಗಿಸಿದೆ. ಒಂದು ಹಂತದಲ್ಲಿ ಜ್ಯೋತಿಬಾ ಪುಲೆ ಈ ಕಾರ್ಯವನ್ನು ಆರಂಭಿಸಿದರು ನಂತರದಲ್ಲಿ ಪಾಳಿ, ಪ್ರಾಕೃತ ಭಾಷೆಗಳಲ್ಲಿರುವ ಬೌದ್ಧ ಜೈನ ಗ್ರಂಥಗಳ ಆಧಾರದಲ್ಲಿ, ವಿದೇಶಿ ಪ್ರಾಚೀನ ಪ್ರವಾಸಿ ಬರಹಗಾರರ ಉಲ್ಲೇಖಗಳನ್ನು ಆಧರಿಸಿ ದಲಿತ ಕುಲಕಫನಗಳು ಮತ್ತು ಐತಿಹ್ಯಗಳನ್ನು ಆಧರಿಸಿ ಚರಿತ್ರೆಯನ್ನು ಪುನಾರಚಿಸುವ ಕೆಲಸ ಮೊದಲಾಗಿದೆ. ಇದಕ್ಕೆ ಭಾಷಾಶಾಸ್ತ್ರದ ನೆರವನ್ನು ಪಡೆದು 'ಖಾಲಿಬಿಟ್ಟ ಸ್ಥಳಗಳನ್ನು' ಚರಿತ್ರೆಯಲ್ಲಿ ಸೂಕ್ತವಾಗಿ ತುಂಬಲು ಪ್ರಯತ್ನಗಳು ನಡೆಯುತ್ತಿವೆ.
ಏನೇ ಆದರೂ ಅಂತಹ ಸಾಹಸ ಪ್ರವೃತ್ತಿಯ ಲೇಖಕರು ಇತಿಹಾಸದ ಪುನಾರಚನೆ ಮತ್ತು ಪ್ರತಿಪಾದನೆಯಲ್ಲಿ ತೊಡಗಿದ್ದಾರೆಂಬುದು ಮೆಚ್ಚುತಕ್ಕ ವಿಷಯವಾಗಿದೆ. ಮೋನಿಗಲ ರಾಮರಾವ್ ತೆಲುಗಿನಲ್ಲಿ ಬರೆದ 'ಹೊಲೆ ಮಾದಿಗರ ಪ್ರಾಚೀನ ಚರಿತ್ರೆ' ಕೃತಿಯನ್ನು ಲೇಖಕ ವೆಂಕಟೇಶ ಬೇವಿನವೆಂಟಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಇದೊಂದು ಗಮನಾರ್ಹ ಕೃತಿ. ಈ ಕೃತಿಯಲ್ಲಿ ಭಾಷಾ ಶಾಸ್ತ್ರೀಯವಾಗಿ ಹಲವಾರು ಪದಗಳ ಮೂಲವನ್ನು ವಿಶ್ಲೇಷಿಸಿ ಅವು ಹೊಲೆ-ಮಾದಿಗರ ಚರಿತ್ರೆಯನ್ನು ಸೂಚಿಸುತ್ತಿರುವ ಬಗ್ಗೆ ತಾರ್ಕಿಕ ಚಿಂತನೆಯನ್ನು ಮಂಡಿಸಲಾಗಿದೆ. ಮಲ್ಲ ಮತ್ತು ಮಗಧ ಸಾಮ್ರಾಜ್ಯಗಳ ನಿರ್ಮಾಪಕರು ಮೂಲ ಮಾದಿಗರು ಎಂಬುದನ್ನು ಪ್ರತಿಪಾದಿಸಲಾಗಿದೆ. 'ಮೌರ್ಯ' ಮೊಹರಿಯಾ ಎನ್ನುವ ಇಂದಿನ ಅಸ್ಪರ್ಶ್ಯ ಜಾತಿ ಮೂಲದ ವಂಶ ಎನ್ನುವ ಪ್ರತಿಪಾದನೆ ಇದೆ. ಹಲವು ಕಾರಣಗಳಿಂದ ನಾವಿದನ್ನು ಚಿಂತನೆಗೊಳಪಡಿಸಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ.
- ಡಾ. ಬಂಜಗೆರೆ ಜಯಪ್ರಕಾಶ
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.