Your cart is empty now.
ಮನುಷ್ಯರ ಪ್ರತಿ ಅಸ್ತಿತ್ವದ ಒಳಗೂ ದೈವತ್ವ ಪ್ರಕಟ ಆಗಲಿ ಅಂತಾನೇ ಸಂತರ ಮೂಲಕ ದೇವರೇ ಅವತಾರ ಮಾಡಿಕೋತ ಬಂದಾನ. ಕೇವಲ ಪಂಢರಪುರದೊಳಗ ಅಲ್ಲ, ಕೇವಲ ಆ ದೇವಸ್ಥಾನದ ಒಳಗಲ್ಲ, ಆ ಕಲ್ಲು ವಿಗ್ರಹದೊಳಗ ಮಾತ್ರ ಅಲ್ಲ, ಎಲ್ಲ ಮನುಷ್ಯರ ಒಳಗಿನ ಪಂಢರಪುರದ ಒಳಗೂ ವಿಠಲನ ಸ್ಥಾಪನಾ ಆಗೋತನಕ ಸಂತರ ನಾಮಸಂಕೀರ್ತನೆ ವಿಧಿಯ ಉದ್ಯಾಪನೆಯೂ ಆಗೋದಿಲ್ಲ. ವಿಠ್ಠಲ ಅನ್ನೋ ನಾಮವು ದೈವಿಕ ಸಮತೆಯ, ಅನುಗ್ರಹದ ಸಂದೇಶ. ಆದರ ಈ ಸಂದೇಶ ದೇಶ, ಭಾಷೆಗಳ ಮಿತಿಯನ್ನ ಮೀರಿದ್ದು ಕೂಡ ಆಗೇದ. ಧರ್ಮ ಅನ್ನೋದೇ ಈ ಎರಡೂ ಧ್ರುವಗಳನ್ನ ಜೋಡಿಸೂ ಕೇಂದ್ರ ಆಗೇದ. ದೈವತ್ವ ಇರೋ ಮನುಷ್ಯರು, ಅಥವಾ ಮನುಷ್ಯನ ಬಗೆಗೆ ಕಾರುಣ್ಯ ಇರೋ ದೇವರು, ತಮ್ಮ ಬದುಕಿನ ಕ್ರಮದ ವಿಧಾನದ ಮೂಲಕಾನೆ ಆ ದೈವತ್ವವನ್ನ ಪ್ರಕಟ ಪಡಿಸಬೇಕಾಗ್ತದ. ಸ್ವಯಂಪ್ರತಿಷ್ಠೆ, ಯಾವುದೇ ಬಗೆಯ ದೂರತ್ವ, ಇದನ್ನ ಯಾವ ಸಂತರೂ ಒಪ್ಪಿಕೊಳ್ಳೋದೇ ಇಲ್ಲ.
ರಾಮ, ಕೃಷ್ಣ, ಶಿವ, ವಿಠಲ, ದತ್ತ, ಅಥವಾ ಯಾವುದೇ ಧರ್ಮದ ಯಾವುದೇ ಹೆಸರಿನ ದೈವತ್ವ ಇರಲಿ, ಅವೆಲ್ಲಾ ಆ ಜಗನ್ನಿಯಾಮಕ ಪರಮಾತ್ಮನ ಮುಂದ ಒಂದೇ ಆಗಿರ್ತಾವ. ಸಂತರ ಸಾಹಿತ್ಯವನ್ನ ಇದು ಈ ಭಾಷೆಯ ಸಾಹಿತ್ಯ. ಇದು ಈ ಧರ್ಮ ಪರಂಪರೆಯ ಸಾಹಿತ್ಯ ಅಂತ ಗುರುತಿಸಲಿಕ್ಕೆ ಬರ್ತಾ ಇದ್ರೂ ತಾತ್ವಿಕ ರೂಪದೊಳಗ ಅವು ಎಲ್ಲಾನೂ ಒಂದೇನೆ ಆಗಿರತಾವ. ಆದ್ದರಿಂದಲೇನೆ ಈ ರೀತಿಯ ಸಂತರ ಸಾಹಿತ್ಯದ ಅಧ್ಯಯನ ಎಲ್ಲಾ ಭಾಷಾದೊಳಗ, ಪರಂಪರೆಗಳ ಒಳಗ ನಡಿತಾನೆ ಬಂದದ. ಇನ್ನು ಮುಂದು ಕೂಡ ಅದು ನಡಿತಾನೆ ಇರಬೇಕಾಗ್ತದ. ಅದರಿಂದಲೇನೆ ಆಯಾ ಜನಾಂಗದ ಕಲ್ಯಾಣ ದೃಷ್ಟಿ ಬೆಳೀತಿರ್ತದ.
ಡಾ|| ದ. ರಾ. ಬೇಂದ್ರೆ
(29 ಡಿಸೆಂಬರ್ 1946, ಕಲ್ಪತರು ಪತ್ರಿಕೆ )
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.