''ಸಾರ್, ನಾನು ಪಾರ್ಟನರ್ ಶಿಪ್ ವ್ಯವಹಾರ ಮಾಡಿ ಕೈ ಸುಟ್ಟುಕೊಂಡಿದ್ದೆ. ನನ್ನ ಬಳಿ ಕೇವಲ 80 ಸಾವಿರ ರೂಪಾಯಿ ಹಣವಿತ್ತು. ಅದರಲ್ಲಿ ಉಳಿದ ಜೀವನವನ್ನ ಕಟ್ಟಿಕೊಳ್ಳಬೇಕಾದ ಸವಾಲು ನನ್ನ ಮುಂದಿತ್ತು. ಏನು ಮಾಡುವುದು? ಎಲ್ಲಿ ಹೋಗುವುದು? ಬಾಡಿಗೆಗೆಂದು ಬಹಳಷ್ಟು ಮನೆಗಳನ್ನ ಸುತ್ತಾಡಿ ನೋಡಿದೆ. ಎಲ್ಲರೂ 80 ಸಾವಿರದಿಂದ 1 ಲಕ್ಷದ ತನಕ ಅಡ್ಡಾನ್ ಕೇಳುತ್ತಿದ್ದರು. ಇರುವ ದುಡ್ಡು ಮನೆಯ ಅಡ್ವಾನ್ಸ್ ಗೆ ಕೊಟ್ಟರೆ ಮುಂದಿನ ಒಂದೆರಡು ತಿಂಗಳು ಕೆಲಸ ಹುಡುಕಲು ಸಮಯ ಬೇಕು. ಬಾಡಿಗೆ... ಬದುಕು... ಹಣ ತರುವುದು ಎಲ್ಲಿಂದ?? ಕೊನೆಗೆ ಸಿಕ್ಕವರು ನಿಮ್ಮ ಅಪ್ಪ. ಅವರ ಬಳಿ ನನ್ನ ಕಥೆ ಹೇಳಿಕೊಂಡೆ. ಒಂದು ಚಾನ್ಸ್ ಕೊಡಿ ಸಾರ್ ಜೀವನವನ್ನ ಮತ್ತೆ ಹಳಿಗೆ ತರಬೇಕಿದೆ ಎಂದು ಮನವಿ ಮಾಡಿಕೊಂಡೆ. ನಿಮ್ಮ ತಂದೆ 80ರ ಬದಲು 40 ಸಾವಿರ ಅಡ್ವಾನ್ಸ್ ತೆಗೆದುಕೊಂಡು ಅಂದು ನನಗೆ ಮನೆ ಬಾಡಿಗೆಗೆ ಕೊಟ್ಟರು. ಮುಂದಿನ ಒಂದು ತಿಂಗಳಲ್ಲಿ ಕೆಲಸ ಹುಡುಕಿಕೊಂಡೆ, ಬದುಕು ಈಗ ಹಸನಾಗಿದೆ. ಬುಲೆಟ್ ಆಯ್ತು, ಕಾರು ಕೊಂಡೆ, ಮದುವೆ ಆಯ್ತು, ಪುಟಾಣಿ ಗೌರಿ ಕೂಡ ನಮ್ಮ ಬಾಳಿಗೆ ಬಂದಿದ್ದಾಳೆ. ಇನ್ನು ಸ್ವಂತ ಮನೆ ಮಾಡುವುದು ಒಂದು ಬಾಕಿ ಇದೆ. ಭಗವಂತನ ದಯೆಯಿಂದ ಇನ್ನೊ೦ದೆರಡು ವರ್ಷದಲ್ಲಿ, ಅದೂ ಈಡೇರುವ ಲಕ್ಷಣಗಳು ಕಾಣುತ್ತಿವೆ.'' ಅಪ್ಪನ ಅಂತಿಮ ದರ್ಶನ ಪಡೆಯಲು ಬಂದ ನಮ್ಮ ಒಬ್ಬ ಟೆನೆಂಟ್ ಹೇಳಿಕೊಂಡ ಕಥೆ ಮೇಲಿನದು.
ಅಣ್ಣ (ಅಪ್ಪ) ಬದುಕಲ್ಲಿ ಒಂದಲ್ಲ ಹಲವು ಪ್ರಯತ್ನಗಳನ್ನ ಮಾಡಿದ್ದರು. ಅವೆಲ್ಲದರಲ್ಲೂ ಸೋತಿದ್ದರು. ಪಾರ್ಟನರ್ ಶಿಪ್ ವ್ಯವಹಾರದಲ್ಲಿ ಕೂಡ ಅಣ್ಣ ಸಾಕಷ್ಟು ಪೆಟ್ಟು ತಿಂದವರು. ಹೀಗಾಗಿ ಅಣ್ಣನಿಗೆ ಸಿಂಪಥಿ ಜಾಗದಲ್ಲಿ ಎಂಪಥಿ ಇತ್ತು ಅನ್ನಿಸುತ್ತೆ. ವ್ಯವಹಾರದಲ್ಲಿ ಭಾವನೆಗೆ ಜಾಗವಿಲ್ಲ ಎನ್ನುವುದು ನನ್ನ ಫಿಲಾಸಫಿ, ಅಣ್ಣ ಅದಕ್ಕೆ ತದ್ವಿರುದ್ಧವಾಗಿ ಭಾವನೆಯೇ ಬದುಕು ಎಂದು ಬದುಕಿದವರು. ಯಾವುದು ಸರಿ? ಯಾವುದು ತಪ್ಪು? ಅಣ್ಣ ಪ್ರತಿ ಬಿಸಿನೆಸ್ನಲ್ಲಿ ಸೋತಾಗ ಆತನ ಕೈ ಹಿಡಿಯಲು ಯಾರೂ ಇರಲಿಲ್ಲ. ಆಗ ಆತನ ಮನಸ್ಥಿತಿ ಹೇಗಿದ್ದಿರಬಹುದು? ಎಂದು ಈಗ ಯೋಚಿಸಿದಾಗೆಲ್ಲ ಅಯ್ಯೋ ಎನ್ನಿಸುತ್ತೆ. ಅಗೈನ್ ಸಿಂಪಥಿ ಅಷ್ಟೇ... ಎಂಪಥಿ ಬದುಕಲ್ಲಿ ಬರಲು ನಾವು ಆ ಹಾದಿಯಲ್ಲಿ ನಡೆದಿರಬೇಕು.