Your cart is empty now.
ನೀಲಕಂಠದೀಕ್ಷಿತನು ಹದಿನೇಳನೆಯ ಶತಮಾನದಲ್ಲಿದ್ದ ಸಂಸ್ಕೃತಲೋಕದ ವಿಸ್ಮಯಮೂರ್ತಿ, ಈತನ ಕಾವ್ಯ-ಶಾಸ್ತ್ರಸಿದ್ಧಿಯು ಅಪೂರ್ವವಾದದ್ದು. ವಿಶೇಷತಃ ಇವನ ವಿನೋದಮಯಶೈಲಿ ಬಹುರೋಚಕ, ಇವನ ಅನೇಕ ರಮಣೀಯಕೃತಿಗಳ ಪೈಕಿ ಕಲಿವಿಡಂಬನ, ಸಭಾರಂಜನ, ವೈರಾಗ್ಯಶತಕ ಮತ್ತು ಶಾಂತಿವಿಲಾಸ - ಇವು ಅತ್ಯಂತ ಜನಪ್ರಿಯ ಕೃತಿಗಳ ಮೂಲ-ಅನುವಾದ-ಟಿಪ್ಪಣಿಗಳನ್ನು ಪ್ರಕೃತಗ್ರಂಥದಲ್ಲಿ ಕಾಣಬಹುದು. ಇವುಗಳೊಟ್ಟಿಗೆ ಕವಿಯ ದೇಶ-ಕಾಲ-ಕೃತಿಗಳ ಬಗ್ಗೆ ವಿಸ್ತಾರವಾದ ಬೋಧಪ್ರದಪೀಠಿಕೆಯೂ ಉಂಟು. ಕಲಿವಿಡಂಬನವು ಕಲಿಕಾಲದ ವಿಪರೀತಗಳನ್ನು ವಿನೋದವಾಗಿ ವಿಡಂಬಿಸುವ ಅತ್ಯದ್ಭುತ ಲೋಕಸುಧಾರಕ ಶತಕ. ಸಮಾಜದ ಎಲ್ಲ ಸ್ತರಗಳ ಹುಳುಕನ್ನೂ ಎತ್ತಿ ತಿವಿದು ತಿದ್ದುವ ಈ ಕೃತಿಯ ನಿಶಿತವ್ಯಂಗ್ಯವು ಸಮಗ್ರ ಸಂಸ್ಕೃತಸಾಹಿತ್ಯ ದಲ್ಲಿಯೇ ವಿಶಿಷ್ಟವಾಗಿದೆ. ಸಭಾರಂಜನವು ಸರಸವಾಗಿ ನೀತಿಯನ್ನು ತಿಳಿಸುವ ಪುರುಷಾರ್ಥ ಪ್ರತೀಕ. ಸಾರ್ವತ್ರಿಕಮೌಲ್ಯಗಳನ್ನು ಹಿತವಾಗಿ ನಿರೂಪಿಸುವ ಈ ಶತಕವು ಆದರ್ಶಗಳ ಸಂಸ್ಥಾಪನೆಗೆ ಮೀಸಲಾದ ಸುಂದರಸಂಹಿತೆ. ವೈರಾಗ್ಯಶತಕವು ಜೀವನದ ಹೆಗ್ಗುರಿಯಾದ ವಿಮುಕ್ತಿಯನ್ನು ಉದ್ದೇಶಿಸಿ ಲೋಕವಿಡಂಬನೆ ಮತ್ತು ಸಾರ್ವತ್ರಿಕಶಿಕ್ಷಣವನ್ನು ಜೊತೆಜೊತೆಯಾಗಿಯೇ ಸಾಧಿಸುತ್ತಾ ಗಂಭೀರವಾಗಿ ತತ್ತ್ವನಿರೂಪಣೆಗೆ ತೊಡಗುವ ಸರಸಹಾಸ್ಯಲೇಪದ ಅಪೂರ್ವ ಕೃತಿ. ವೈರಾಗ್ಯಪರವಾದ ಸಾಹಿತ್ಯಶ್ರೇಣಿಯಲ್ಲಿ ಇದಕ್ಕಿರುವ ಸ್ಥಾನ ತುಂಬ ಗಣ್ಯವಾದದ್ದು. ಶಾಂತಿವಿಲಾಸವು ವೈರಾಗ್ಯದ ಹಿರಿಮೆಯನ್ನೂ, ಸಂಸಾರದ ಕಂಟಕಗಳನ್ನೂ ನೆನಪಿಗೆ ತರುವ ಕೃತಿ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.