Your cart is empty now.
"ಹೇಳಲ್ಪಟ್ಟಿದ್ದು ಹೇಳಲ್ಪಡುವುದಕ್ಕಾಗಿ ಇರುವುದಿಲ್ಲ" ಆಹಾ! ಇದು ಸಮಸ್ಯೆಯಲ್ಲ. ಇರುವಿಕೆಯ ಸಮಸ್ಯೆಯಲ್ಲ. 'ಹೇಳುವ' ಸಮಸ್ಯೆ. ಹೇಳಲೇಬೇಕಾದ ಸಮಸ್ಯೆ. ಇದನ್ನು ಸಮಸ್ಯೆ ಮಾಡಿಕೊಳ್ಳದೆ ಕಾವ್ಯವು ಕೃತಕೃತ್ಯವಾಗಲಾರದು. ವಚನಕಾರರು ಹೇಳುವ "ಅರಿವು ತದ್ಗತವಾಗಿದೆ" ಎಂಬ ನುಡಿಯನ್ನು ನೆನೆಯುತ್ತಾ ಹೇಳುವುದಾದರೆ ತದ್ಗತವಾದ ಅರಿವನ್ನು ತದ್ಗತವಾಗಿಯೇ ತಿಳಿಯಬಹುದಲ್ಲದೆ, ತದ್ಗತವಾಗದೆ ತಿಳಿಯುವುದು ಸಾಧ್ಯವೇ? ಸಾಧ್ಯವಾಗಬಾರದೆನ್ನುವುದೇ ನ್ಯಾಯವಲ್ಲವೆ? "ರೂಹಿಲ್ಲದ" ಎಂಬೀ ಕವನಗಳ ಗೊಂಚಲಿನ ಹಿಂದೆ ಇರುವ ತಾತ್ವಿಕತೆ- 'ಪರಿಣಾಮ' ಪದ್ಯದಲ್ಲಿದೆ. ಆದರೆ “ಹೇಳಲ್ಪಟ್ಟಿದ್ದು ಹೇಳಲ್ಪಡುವುದಕ್ಕಾಗಿ ಇರುವುದಿಲ್ಲ" ಎಂಬ 'ಹೇಳಿಕೆ' ಕೊಟ್ಟ ಸುಖ ನನ್ನನ್ನು ಆವರಿಸಿಬಿಟ್ಟಿದೆ!
ಕೆಲವು ಪದ್ಯಗಳು ಸ್ಪಟಿಕವನ್ನು ಸೀಳಿದಂತಿವೆ.
- ಲಕ್ಷ್ಮೀಶ ತೋಳ್ವಾಡಿ
ಭೌತಶಾಸ್ತ್ರದ ಬಗ್ಗೆ ನನ್ನ ಸಾಮಾನ್ಯಜ್ಞಾನ ಶೂನ್ಯ, ಸ್ಪೇಸ್, ಟೈಂ, ಆಟಮ್, ಮೋಶನ್, ಪ್ಯೂಷನ್, ಬ್ಲಾಕ್ ಹೋಲ್, ಲಾ ಆಫ್ ಗ್ಯಾವಿಟೇಶನ್ ಮುಂತಾದ ಫಿಸಿಕ್ಸ್, ಆಸ್ಫೋಫಿಸಿಕ್ಸ್ ಪಾರಭಾಷಿಕಗಳು ಇಲ್ಲಿನ ಕೆಲವು ಕನ್ನಡ ಸಮಾನಾರ್ಥಕಗಳ ಬಳಕೆಯನ್ನು ನೋಡಿದಾಗ ನಮ್ಮ ಮನಸ್ಸಿಗೆ ಬರುತ್ತವೆ. 'ಅಣು'ವಿನ ಸುತ್ತಮುತ್ತ ಸರಣಿ ಕವಿತೆಗಳನ್ನೇ ಬರೆದಿದ್ದಾರೆ. ಆಗ ಈ ರಚನೆಗಳ ಹಿಂದಿನ ಕವಿಯ ಸೀರಿಯಸ್ನೆಸ್ ಬಗ್ಗೆ ನಮ್ಮ ಗಮನ ಹರಿಯುತ್ತದೆ. ಇಂಥ ಪ್ರಯತ್ನದಿಂದ ಕವಿ ಕವಿತೆಗಳಲ್ಲಿ, ವಿರೋಧಾಭಾಸ, ಕ್ಷಣಭಂಗುರತೆ, ಸರ್ವವ್ಯಾಪಕತೆಗಳನ್ನು ಉಳಿಸಿಕೊಳ್ಳುವ, ಅವುಗಳ ಮೂಲಕ ಸತ್ಯವನ್ನು ಹುಡುಕುವ ಆಶಯವನ್ನು ಪ್ರಕಟಿಸುತ್ತಿರಬಹುದೇ ಅನಿಸುತ್ತದೆ. ಅವುಗಳ ಹಿನ್ನೆಲೆಯಲ್ಲಿ ಸೃಷ್ಟಿಕ್ರಿಯೆ, ನಿಸರ್ಗ ಮತ್ತು ಬದುಕು - ಇವುಗಳನ್ನು ಅರ್ಥೈಸಿಕೊಳ್ಳುವ ಕವಿಯ ಪ್ರಯೋಗ ಹೊಸದು ಎನಿಸುತ್ತದೆ. ತಾತ್ವಿಕ ಗ್ರಂಥಗಳಲ್ಲಿ ಅವು ನಡೆದಿವೆ. ಆದರೆ ಆಧುನಿಕ ಕಾವ್ಯ ವಲಯದಲ್ಲಿ ಈ ಪ್ರಮಾಣದಲ್ಲಿ ಇಲ್ಲವೆನ್ನಬಹುದು.
ಈ ರಚನೆಗಳಲ್ಲಿ ಭಾಷೆ, ಕಾಲ, ವಿನಯ, ಸತ್ಯ ಮುಂತಾದ ಅನೇಕ ಸಂಗತಿಗಳನ್ನು ಕುರಿತು ಕಾವ್ಯಭಾವಗಳನ್ನು ಪ್ರಕಟಿಸಿದ್ದಾರೆ. ಒಟ್ಟಾರೆ ಇವು ಮಹತ್ವಾಕಾಂಕ್ಷೆಯ ರಚನೆಗಳು.
-ಅಗ್ರಹಾರ ಕೃಷ್ಣಮೂರ್ತಿ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.