Your cart is empty now.
ನಮ್ಮೊಡನೆ ಜೈವಿಕವಾಗಿ ಹೆಣೆದುಕೊಂಡಿರದ ಆದರೆ ನಾವು ಅನಿವಾರ್ಯವಾಗಿ ಕಟ್ಟಿಕೊಂಡ ಬದುಕಿನ ದೈನಿಕ ಲಯಗಳಲ್ಲಿ ಏನನ್ನೊ ಹುಡುಕುವುದು; ಅನೂಹ್ಯವಾದ, ಅತೀತವಾದ ಹಾಗೆಯೇ ಅಗಮ್ಯವಾದ ಮತ್ತಾವುದೋ ಸೆಳೆತಕ್ಕೆ ಈ ದೈನಿಕ ಲಯಗಳ ನಡುವೆ ಸಿಲುಕುವುದು; ಈ ಎರಡು ತುಯ್ತಗಳ ನಡುವೆ ಸಾಗುವ ಕಥನವಿದು. ಈ ಸೆಳೆತ ಕಾಣದುದರ ಎಡೆಗಿನ ತುಯ್ತವೋ ಅಥವಾ ಕಳೆದ ಅನುಭವವೊಂದರ ಮರುಕಳಿಕೆಯೋ ಎಂಬ ದ್ವಂದ್ವ ಕಾಣುತ್ತದೆ.
ದೈನಿಕ ಲಯಗಳ ನಿರೂಪಣೆಯಲ್ಲಿ ನಿರೂಪಕರು ಹೊರಗೆ ನಿಂತು ನೋಡುವ, ಮತ್ತು ಒಳಹೊಕ್ಕು ವಿವರಿಸುವುದನ್ನು ಎಚ್ಚರದಿಂದ ನಿವಾರಿಸಿಕೊಳ್ಳುವ ನೆಲೆಯನ್ನು ಅನುಸರಿಸುತ್ತಾರೆ. ಆದರೆ ಈ ದೈನಿಕ ಲಯಗಳ ನಡುವೆ ತಲೆಯೆತ್ತುವ ದೂರದ ಕರೆಯು ಪದಗಳಲ್ಲಿ, ಕವಿತೆಗಳಲ್ಲಿ, ನಾದದಲ್ಲಿ ಮೈಮುರಿದೇಳುತ್ತಿರುತ್ತದೆ. ಈ ಸೆಳೆತದ ಉತ್ಕಟತೆಗಳು ಒಂದು ಕಡೆ. ಆ ದೂರದ ಕರೆಯು ವಾಸ್ತವವಾಗಿ ಮೈದಳೆಯುವಾಗಿನ ಅನುಭವದಲ್ಲಿ ದಿಟ ಸಟೆಗಳ ನಡುವಣ ಗಡಿಗೆರೆಗಳು ಅಳಿಸಿ ಹೋಗುವುದು ಇನ್ನೊಂದು ಕಡೆ. ಈ ಎರಡು ತುದಿಗಳ ನಡುವಣ ಶೋಧವೇ ಈ ಕಾದಂಬರಿಯ ಗುರಿ ಎಂದು ತಿಳಿದಿರುವೆ.
ಅನುಭವ ಕಥನದ ನುಡಿಗಟ್ಟಿಗೂ ಅನುಭವ ಮಂಥನದ ನುಡಿಗಟ್ಟಿಗೂ ಇಲ್ಲಿ ಅಪಾರ ವ್ಯತ್ಯಾಸವಿದೆ. ಅನುಭವ ಕಥನದಲ್ಲಿ ಲೋಕದ ಬಿಂಬವಾಗಲು ನುಡಿಯು ಹವಣಿಸುತ್ತದೆ. ಆದರೆ ಅನುಭವ ಮಂಥನದಲ್ಲಿ ನುಡಿಯು ಮೈದಳೆಯುವ ಮೂಲಕವೇ ಅನುಭವವು ಆಕಾರ ಪಡೆಯುತ್ತದೆ. ಇದೇ ಕಾರಣದಿಂದ ಈ ಎರಡನೆಯ ನೆಲೆಯ ನಿರೂಪಣೆಯು ತೀವ್ರಗೊಂಡಾಗ ಕವಿತೆಗಳಾಗಿ ಮಾರ್ಪಡುವುದನ್ನು ಕಾಣುತ್ತೇವೆ.
ಅನುಭವ ಶೋಧದ ಹೊಸ ಮಾದರಿಯನ್ನು ಈ ಕಾದಂಬರಿಯಲ್ಲಿ ಭಾಷಿಕವಾಗಿ ಶೋಧಿಸಿರುವ ಕಾವ್ಯಾ ಕಡಮೆಯವರನ್ನು ಅಭಿನಂದಿಸಲೇಬೇಕು.
ಕೆ. ವಿ. ನಾರಾಯಣ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.