Your cart is empty now.
ದಲಿತ ಕಾವ್ಯಕ್ಕೆ ಐದು ದಶಕಗಳ ಇತಿಹಾಸವಿದೆ. ದನಿ ಇಲ್ಲದವರಿಗೆ ದನಿಯಾದದ್ದು ಇದರ ಹೆಗ್ಗಳಿಕೆ. ಆರಂಭದಲ್ಲಿ ಸಿಟ್ಟು, ಆಕ್ರೋಶಗಳು ಹೊರಬಂದವು. ಅದುವರೆವಿಗೂ ಕೇಳಿರದಿದ್ದ ಭಾಷೆ, ನುಡಿಗಟ್ಟುಗಳು ಕನ್ನಡ ಕಾವ್ಯವನ್ನು ಹೊಕ್ಕವು ಗ್ರಾಮೀಣ ಭಾರತದ ತಳಸಮುದಾಯಗಳ ನೋವು, ಹಸಿವು, ಬಡತನ, ಶೋಷಣೆ ಕನ್ನಡಿಗರಿಗೆ ಪರಿಚಯವಾಯಿತು. ನಂತರದ ದಶಕಗಳಲ್ಲಿ ಕಾವ್ಯ ತನ್ನ ಮಗ್ಗಲು ಬದಲಿಸಿ ದಟ್ಟ ಅನುಭವಗಳೊಂದಿಗೆ ತೆರಕೊಂಡಿತು. ಕಾವ್ಯದ ಸೂಕ್ಷ್ಮತೆಯ ಕಡೆಗೆ ಗಮನ ಹರಿಸಿತು. ಅಲ್ಲಿಯವರೆಗೂ ಪಾರ್ಶ್ಚಿಕವಾಗಿದ್ದ ಕನ್ನಡ ಸಾಹಿತ್ಯಕ್ಕೆ ದಲಿತ-ಬಂಡಾಯ ಸಾಹಿತ್ಯ ಪೂರ್ಣತ್ವವನ್ನು ದೊರಕಿಸಿಕೊಟ್ಟಿತು ಎಂದು ನಾನು ನಂಬುತ್ತೇನೆ. ಕಾಲದೊಡ್ಡಿಗೆ ಕಾವ್ಯದ ಓಘವೂ ಬದಲಾಗುತ್ತಿರುತ್ತದೆ. ಈ ಯಾಂಬು (ಯಾಂತ್ರಿಕ ಬುದ್ಧಿಮತ್ತೆ) ಕಾಲದಲ್ಲಿ ಬದಲಾವಣೆ ಅತೀವ ವೇಗವನ್ನು ಪಡೆದುಕೊಂಡಿದೆ. ಆದರೆ ಭಾರತದ ಸಂದರ್ಭದಲ್ಲಿ 'ಜಾತಿಪದ್ಧತಿ' ಸ್ಥಗಿತಗೊಂಡ ನೆಲೆಯಲ್ಲಿಯೆ ನಿಂತಿದೆ. ಅದಕ್ಕೆ ಜ್ಞಾನದ ಸೋಂಕು ತಗಲುವುದೇ ಇಲ್ಲ. ಅದರ ಪರಿಣಾಮವೇ 'ಕುದಿವ ಕಣ್ಣೀರು' ಕವಿತೆಗಳು.
ವಿಕಾಸ್ ಆರ್.ಮೌಲ್ಯ ಈಗಾಗಲೇ ಭರವಸೆ ಮೂಡಿಸಿರುವ ಲೇಖಕರಾಗಿದ್ದಾರೆ. ಅನುವಾದಕರಾಗಿಯೂ ಹೆಸರು ಮಾಡಿದ್ದಾರೆ. ಇದು ಅವರ ಮೊದಲ ಕವಿತಾ ಸಂಕಲನವಾದ್ದರಿಂದ ಕೆಲವು ಮಿತಿಗಳಿವೆ. ಕಾವ್ಯ ಮೂಲದಲ್ಲಿ ಜೀವನ ವಿಮರ್ಶೆಯೆ. ಆದ್ದರಿಂದ ಆತ್ಮಾನುಸಂಧಾನದ ಕವಿತೆಗಳು ಇಲ್ಲಿ ಹೆಚ್ಚಾಗಿವೆ. ಪ್ರಯೋಗಶೀಲ ಕವಿ ಎಂದು ಹೇಳಬಹುದು. 'ಕನ್ನಡ ಎಂದರೆ ಹೊರಬಾಡು ಇದ್ದಂಗೆ' ಎಂದು ಬರೆಯಬಲ್ಲರು, ಬುದ್ಧರ ಕರುಣೆಯನ್ನು ರೂಢಿಸಿಕೊಂಡವರು. ಅಲ್ಲಿ ನಡುರಾತ್ರಿಯಲ್ಲಿ ಹಾರಿ ಬಿಡುವ/ ಬಾಂಬುಗಳಿಗೆ ರೆಕ್ಕೆ ಬಂದಿದ್ದರೆ/ಹಾರುತ್ತಲೇ ಜೀವ/ ಬಿಡುತ್ತಿದ್ದವೇನೋ.. ಎಂಬ ಸಳಿಲುಗಳಿವೆ. ಇವರ ಕಾವ್ಯಕ್ಕೆ ರೆಕ್ಕೆಗಳು ಮೂಡಿ ಎತ್ತರಕ್ಕೆ ಹಾರಲಿ ಎಂದು ಹಾರೈಸುತ್ತೇನೆ.
-ಡಾ.ಮೂಡ್ನಾಕೂಡು ಚಿನ್ನಸ್ವಾಮಿ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.